ಕಂದಾಯ ಇಲಾಖೆಯಿಂದ ಕೈಬರಹದ ಭೂದಾಖಲೆಗೆ ಕೊಕ್‌: ಡಿಜಿಟಲ್‌ ರೂಪದಲ್ಲಿ ಮಾತ್ರ ನೀಡುವ ವ್ಯವಸ್ಥೆ ಜಾರಿ, ದೃಢೀಕೃತ ನಕಲು ಪ್ರತಿಯೂ ಸಿಗಲ್ಲ

ಕಂದಾಯ ಇಲಾಖೆಯಿಂದ ಕೈಬರಹದ ಭೂದಾಖಲೆಗೆ ಕೊಕ್‌: ಡಿಜಿಟಲ್‌ ರೂಪದಲ್ಲಿ ಮಾತ್ರ ನೀಡುವ ವ್ಯವಸ್ಥೆ ಜಾರಿ, ದೃಢೀಕೃತ ನಕಲು ಪ್ರತಿಯೂ ಸಿಗಲ್ಲ

ಕೊಡತಗೇರಿ ಎಕ್ಸಪ್ರೆಸ್ ಡಿಜಿಟಲ್ ಡೆಸ್ಕ್
ಕಂದಾಯ ಇಲಾಖೆಯು ಕೈಬರಹದಲ್ಲಿ ಭೂದಾಖಲೆ ನೀಡುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ್ದು, ಡಿಜಿಟಲ್ ರೂಪದಲ್ಲಿ ಮಾತ್ರ ವಿತರಿಸಲು ಆದೇಶಿಸಿದೆ. ‘ಎ’ ಮತ್ತು ‘ಬಿ’ ವರ್ಗದ ಭೂದಾಖಲೆಗಳು ಡಿಜಿಟಲ್ ರೂಪದಲ್ಲಿ ತಹಸೀಲ್ದಾರ್ ಕಚೇರಿಗಳಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ನಾಡಕಚೇರಿಗಳಿಗೂ ವಿಸ್ತರಿಸಲಾಗುವುದು. ಇದರಿಂದ ಭೂದಾಖಲೆಗಳನ್ನು ಪಡೆಯುವುದು ಸುಲಭವಾಗಲಿದ್ದು, ವಿಳಂಬವನ್ನು ತಪ್ಪಿಸಬಹುದು.
ಹೈಲೈಟ್ಸ್‌:
ಭೂದಾಖಲೆಗಳನ್ನು ಡಿಜಿಟಲ್‌ ರೂಪದಲ್ಲಿ ನೀಡುವ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ, ಇದರಿಂದ 7 ದಿನಗಳೊಳಗಾಗಿ ದಾಖಲೆಗಳು ಲಭ್ಯವಾಗುವುದು.
ರಾಜ್ಯದ 240 ತಹಸೀಲ್ದಾರ್ ಕಚೇರಿಗಳಲ್ಲಿ ಡಿಜಿಟಲ್‌ ದಾಖಲೆ ವಿತರಣೆಯ ಶೀಘ್ರ ಆರಂಭವಾಗಿದ್ದು, 700 ‘ಅಟಲ್‌ಜಿ ಜನಸ್ನೇಹಿ ಕೇಂದ್ರ’ಗಳಿಗೆ ವಿಸ್ತರಿಸಲು ಯೋಜನೆಯಾಗಿದೆ.
ಭೂ ಸುರಕ್ಷಾ ಯೋಜನೆಯಡಿ 100 ಕೋಟಿ ಪುಟ ಭೂದಾಖಲೆಗಳ ಸ್ಕ್ಯಾನಿಂಗ್ ಕಾರ್ಯವನ್ನು ಪ್ರಾರಂಭಿಸಲಾಗಿದೆ, ಇದರಿಂದ ದಾಖಲೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ.
ಬೆಂಗಳೂರು: ಕಂದಾಯ ಇಲಾಖೆಯು ಕೈಬರಹದಲ್ಲಿಭೂದಾಖಲೆ ನೀಡುವ ವ್ಯವಸ್ಥೆಗೆ ತಿಲಾಂಜಲಿ ಹಾಡಿದ್ದು, ಡಿಜಿಟಲ್‌ ರೂಪದಲ್ಲೇ ವಿತರಿಸುವುದನ್ನು ಕಡ್ಡಾಯಗೊಳಿಸಿದೆ.
ಈಗಾಗಲೇ ‘ಡಿಜಿಟಲ್‌ ಭೂದಾಖಲೆಗಳ ವಿತರಣೆ’ಗೆ ಶುರುವಾಗಿದೆ. ಇನ್ನು ಮುಂದೆ ‘ಎ’ ಹಾಗೂ ‘ಬಿ’ ವರ್ಗದ ಭೂದಾಖಲೆಗಳನ್ನು ಸಾಂಪ್ರದಾಯಿಕ ದೃಢೀಕೃತ ನಕಲು ಪ್ರತಿ ಅಥವಾ ಕೈಬರಹದ ದಾಖಲೆ ನೀಡುವ ಬದಲಾಗಿ ಡಿಜಿಟಲ್‌ ರೂಪದಲ್ಲಿಯೇ ಸಿಗಲಿದೆ. ಸದ್ಯ ರಾಜ್ಯದ ಎಲ್ಲ240 ತಹಸೀಲ್ದಾರ್‌ ಕಚೇರಿಗಳಲ್ಲಿ ಡಿಜಿಟಲ್‌ ದಾಖಲೆ ನೀಡಲಾಗುತ್ತಿದ್ದು, ಶೀಘ್ರವೇ ರಾಜ್ಯದಲ್ಲಿರುವ 700 ‘ಅಟಲ್‌ಜಿ ಜನಸ್ನೇಹಿ ಕೇಂದ್ರ’ಗಳಿಗೂ(ನಾಡಕಚೇರಿ) ವಿಸ್ತರಿಸಲು ಕಂದಾಯ ಇಲಾಖೆ ಮುಂದಾಗಿದೆ.

ಅರ್ಜಿದಾರರು ಕೋರುವ ಭೂದಾಖಲೆ ಈಗಾಗಲೇ ಸ್ಕ್ಯಾ‌ನ್‌ ಆಗಿ ದೃಢೀಕರಣಗೊಂಡಿದ್ದರೆ ಒಂದೇ ದಿನದಲ್ಲಿ ಡಿಜಿಟಲ್‌ ದಾಖಲೆ ವಿತರಣೆಯಾಗಲಿದೆ. ಒಂದೊಮ್ಮೆ ಸ್ಕ್ಯಾ‌ನಿಂಗ್‌ ಪ್ರಕ್ರಿಯೆ ಆಗಿರದಿದ್ದರೆ, ಏಳು ದಿನದೊಳಗೆ ಡಿಜಿಟಲ್‌ ದಾಖಲೆ ವಿತರಣೆಯಾಗಲಿದೆ. ಇದರಿಂದ ಭೂದಾಖಲೆಗಳನ್ನು ಯಾವುದೇ ಅಡಚಣೆ, ವಿಳಂಬವಿಲ್ಲದಂತೆ ಪಡೆಯಲು ಅನುಕೂಲವಾಗಲಿದೆ.
ರಾಜ್ಯದ ಜನರ ಭೂದಾಖಲೆಗಳನ್ನು ಡಿಜಿಟಲ್‌ ರೂಪದಲ್ಲಿಸಂರಕ್ಷಿಸುವ ಉದ್ದೇಶದಿಂದ ಕಂದಾಯ ಇಲಾಖೆ ಈಗಾಗಲೇ ‘ಭೂ ಸುರಕ್ಷಾ’ ಯೋಜನೆ ಜಾರಿಗೊಳಿಸಿದೆ. ‘ಭೂ ಸುರಕ್ಷಾ’ ಯೋಜನೆ ಪ್ರಾಯೋಗಿಕವಾಗಿ ಜಾರಿಯಾಗಿದ್ದ 31 ಜಿಲ್ಲೆ ಪೈಕಿ ಕೆಳಕಂಡ 17 ತಾಲೂಕುಗಳಲ್ಲಿ ಸ್ಕ್ಯಾ‌ನಿಂಗ್‌ ಪೂರ್ಣವಾಗಿದ್ದು, ಉಳಿದ 209 ತಾಲೂಕುಗಳಲ್ಲಿ ಸ್ಕ್ಯಾ‌ನಿಂಗ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಯಂ ಆಗಿ ಸಂರಕ್ಷಿಸಿಡಬೇಕಾದ ‘ಎ’ ವರ್ಗದ ಭೂದಾಖಲೆಗಳು ಹಾಗೂ 30 ವರ್ಷಗಳವರೆಗೆ ಸಂರಕ್ಷಿಸಬೇಕಾದ ‘ಬಿ’ ವರ್ಗದ ಭೂದಾಖಲೆಗಳ ಸ್ಕ್ಯಾ‌ನಿಂಗ್‌ ಕಾರ್ಯವೂ ಶುರುವಾಗಿದೆ. ‘ಎ’ ಮತ್ತು ‘ಬಿ’ ವರ್ಗದ ಭೂದಾಖಲೆಗಳು ಸುಮಾರು 100 ಕೋಟಿ ಪುಟಕ್ಕಿಂತ ಹೆಚ್ಚು ಇರುವ ಅಂದಾಜು ಇದೆ. ಈವರೆಗೆ 32 ಕೋಟಿ ಪುಟಗಳಷ್ಟು ದಾಖಲೆಗಳ ಸ್ಕ್ಯಾ‌ನಿಂಗ್‌ ಪೂರ್ಣಗೊಂಡಿದ್ದು, ಬಾಕಿ 68 ಕೋಟಿ ಪುಟಗಳ ಸ್ಕ್ಯಾ‌ನಿಂಗ್‌ ಪೂರ್ಣಗೊಳಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಹಾಗಾಗಿ ಡಿಜಿಟಲ್‌ ರೂಪದಲ್ಲೇ ಭೂದಾಖಲೆ ವಿತರಣೆ ಕಡ್ಡಾಯಗೊಳಿಸುವ ಮೂಲಕ ಬಾಕಿ ಭೂದಾಖಲೆ ಪುಟಗಳ ತ್ವರಿತ ಸ್ಕ್ಯಾ‌ನಿಂಗ್‌ ಪ್ರಕ್ರಿಯೆಗೆ ಚಾಲನೆ ನೀಡಿದೆ.

ದೃಢೀಕೃತ ನಕಲು ಸದ್ಯಪ್ರತಿ ವಿತರಣೆ
ಈ ಹಿಂದೆ ಇಲಾಖೆಗಳಲ್ಲಿ ಭೂದಾಖಲೆಗಳನ್ನು ‘ಕ್ಯಾಟಲಾಗಿಂಗ್‌’ ಮತ್ತು ‘ಇಂಡೆಕ್ಸಿಂಗ್‌’ ವ್ಯವಸ್ಥೆಯಡಿ ಗಣಕೀಕರಿಸುವ ಪ್ರಕ್ರಿಯೆ ಶುರವಾಗಿತ್ತು. ಅಂದರೆ ನಿರ್ದಿಷ್ಟ ರೆಕಾರ್ಡ್‌ ರೂಂನಲ್ಲಿ ಯಾವೆಲ್ಲಾ ಪ್ರದೇಶದ ಭೂದಾಖಲೆಗಳು ಯಾವ ಕಡತಗಳಲ್ಲಿ, ಯಾವ ಜಾಗದಲ್ಲಿ ಯೋಜಿತವಾಗಿವೆ ಎಂಬ ಮಾಹಿತಿಯನ್ನು ಕಂಪ್ಯೂಟರ್‌ನಲ್ಲೇ ಪತ್ತೆ ಹಚ್ಚುವ ವ್ಯವಸ್ಥೆ ರೂಪುಗೊಂಡಿತ್ತು. ಆದರೆ ಇದು ಪರಿಣಾಮಕಾರಿಯಾಗಿ ನಡೆದಿಲ್ಲ. ಹಾಗಾಗಿ ಜನರು ಕೋರುವ ಭೂದಾಖಲೆಯನ್ನು ಪತ್ತೆ ಹಚ್ಚಿ ನಕಲು ಪ್ರತಿ ದೃಢೀಕರಿಸಿ ನಿಗದಿತ ಶುಲ್ಕ ಪಡೆದು ನೀಡಲಾಗುತ್ತಿತ್ತು. ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತಿತ್ತು. ಕ್ಯಾಟಲಾಗಿಂಗ್‌ ಹಾಗೂ ಇಂಡೆಕ್ಸಿಂಗ್‌ನಲ್ಲಿ ದಾಖಲಿಸಲಾಗಿದ್ದ ಅಷ್ಟೂ ದಾಖಲೆಗಳನ್ನು ಸ್ಕ್ಯಾ‌ನಿಂಗ್‌ ಮಾಡಿ ಅಪ್‌ಲೋಡ್‌ ಮಾಡಲಾಗಿದೆ. ಹಾಗಾಗಿ ಯಾವುದೇ ಭೂದಾಖಲೆಯನ್ನು ತಕ್ಷಣ ಪತ್ತೆ ಹಚ್ಚಿ ವಿತರಿಸಲು ಅವಕಾಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದರ್ಖಾಸ್ತು ಪೋಡಿ ದುರಸ್ತಿ ಸುಲಭ
ತಹಸೀಲ್ದಾರ್‌ ಕಚೇರಿಗಳಲ್ಲಿನ ಭೂದಾಖಲೆಗಳ ಸ್ಕ್ಯಾ‌ನಿಂಗ್‌ ಪ್ರಕ್ರಿಯೆ ಪೂರ್ಣಗೊಂಡರೆ ಭೂಮಂಜೂರಾತಿ ದಾಖಲೆಗಳನ್ನು ಸಂಪೂರ್ಣ ಡಿಜಿಟಲ್‌ ರೂಪದಲ್ಲಿಸಂರಕ್ಷಿಸಿದಂತಾಗಿದೆ. ಸ್ಕ್ಯಾ‌ನಿಂಗ್‌ ಆದ ಭೂದಾಖಲೆಗಳನ್ನು ದರ್ಖಾಸ್ತು ಪೋಡಿಗೆ ಜೋಡಣೆ ಮಾಡಲಾಗುತ್ತಿದ್ದು, ದರ್ಖಾಸ್ತು ಪೋಡಿ ದಾಖಲೆ ಪಡೆಯುವುದು ಸುಲಭವಾಗಲಿದೆ ಎಂದು ತಿಳಿಸಿದ್ದಾರೆ.
ಜನ ಬಯಸುವ ಭೂದಾಖಲೆಗಳನ್ನು ಡಿಜಿಟಲ್‌ ರೂಪದಲ್ಲಿವಿತರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಸುರಕ್ಷಿತವಾಗಿ ಸಂರಕ್ಷಿಸಿದ ಭೂದಾಖಲೆಗಳನ್ನು ಖಾಸಗಿ ಆಸ್ತಿದಾರರು ಪಾರದರ್ಶಕ ವಿಧಾನದಡಿ ಪಡೆಯಬಹುದು. ಹಾಗೆಯೇ ದೀರ್ಘಕಾಲದಿಂದ ಬಾಕಿಯಿರುವ ಬಗರ್‌ಹುಕುಂ, ದರ್ಖಾಸ್ತು ಪೋಡಿ ಇತರೆ ವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕೂ ನೆರವಾಗಲಿದೆ.
ಸುನೀಲ್‌ಕುಮಾರ್‌ ಪೊಮ್ಮಲ – -ಕಂದಾಯ ಇಲಾಖೆ ಆಯುಕ್ತ
ಡಿಜಿಟಲ್‌ ರೂಪದ ದಾಖಲೆ ವ್ಯವಸ್ಥೆ ಅನುಕೂಲ
* ದಾಖಲೆಗಳು ಶಿಥಿಲವಾಗಿ ಹಾಳಾಗುವುದನ್ನು ತಡೆಯಬಹುದು
* ಭೂದಾಖಲೆ ದೃಢೀಕೃತ ಪ್ರತಿಗಾಗಿ ಅನಗತ್ಯವಾಗಿ ಕಾಯಬೇಕಿಲ್ಲ
* ಭೂದಾಖಲೆಗಳನ್ನು ತಿರುಚಲು ಅವಕಾಶವಿಲ್ಲ
* ತಾವು ಇರುವಲ್ಲೇ ಭೂದಾಖಲೆ ಕೋರಿ ಅರ್ಜಿ ಸಲ್ಲಿಸಲು ಅವಕಾಶ
* ಅರ್ಧಕ್ಕೆ ನಿಂತ ಹಳೆಯ ಬಗರ್‌ಹುಕುಂ ಅರ್ಜಿ ವಿಲೇವಾರಿಗೂ ಅನುಕೂಲ
* ಪಾರದರ್ಶಕವಾಗಿ ಕಾಲಮಿತಿಯಲ್ಲಿ ಡಿಜಿಟಲ್‌ ಭೂದಾಖಲೆ ಲಭ್ಯ

You may have missed

ಸಿದ್ದರಾಮಯ್ಯ: ಅರಸು ದಾಖಲೆ ಸರಿಗಟ್ಟಿದ ‘ಅಹಿಂದ’ ಚಾಣಕ್ಯ – ಜನಪರ ಆಡಳಿತದ ಹೊಸ ಪರ್ವ ​ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದೀರ್ಘಕಾಲ ಮುಖ್ಯಮಂತ್ರಿಯಾಗಿ ರಾಜ್ಯವಾಳಿದ ಕೀರ್ತಿ ಈವರೆಗೆ ದಿವಂಗತ ಡಿ. ದೇವರಾಜ ಅರಸು (7 ವರ್ಷ 239 ದಿನಗಳು) ಅವರಿಗೆ ಸಲ್ಲುತ್ತಿತ್ತು. ಆದರೆ, ಜನವರಿ 7, 2026ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಐತಿಹಾಸಿಕ ದಾಖಲೆಯನ್ನು ಮುರಿದು, ಕರ್ನಾಟಕದ ಇತಿಹಾಸದಲ್ಲಿ ಅತಿ ಸುದೀರ್ಘ ಕಾಲ ಆಡಳಿತ ನಡೆಸಿದ ನಾಯಕನಾಗಿ ಹೊರಹೊಮ್ಮಿದ್ದಾರೆ. ಇದು ಕೇವಲ ಅಂಕಿ-ಅಂಶಗಳ ಸಾಧನೆಯಲ್ಲ, ಬದಲಿಗೆ ಅವರ ಅಚಲ ಸಿದ್ಧಾಂತ ಮತ್ತು ಜನಪ್ರಿಯತೆಯ ಪ್ರತೀಕವಾಗಿದೆ. ​ಅರಸು ಮತ್ತು ಸಿದ್ದರಾಮಯ್ಯ: ಸಮಾಜಮುಖಿ ಹೋಲಿಕೆ ​ದೇವರಾಜ ಅರಸು ಅವರು ಹೇಗೆ ಭೂ ಸುಧಾರಣೆ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣದ ಮೂಲಕ ‘ಕರ್ನಾಟಕದ ಕ್ರಾಂತಿಕಾರಿ ನಾಯಕ’ ಎನಿಸಿಕೊಂಡರೋ, ಸಿದ್ದರಾಮಯ್ಯನವರು ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ವರ್ಗಗಳ ಧ್ವನಿಯಾಗಿ ಅದೇ ಹಾದಿಯಲ್ಲಿ ಮುನ್ನಡೆದಿದ್ದಾರೆ. ಮೈಸೂರು ಮಣ್ಣಿನ ಈ ಇಬ್ಬರು ನಾಯಕರು ಶೋಷಿತ ಸಮುದಾಯಗಳಿಗೆ ರಾಜಕೀಯ ಅಸ್ತಿತ್ವ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ​ಉತ್ತಮ ಆಡಳಿತದ ಪ್ರಮುಖ ಮೈಲಿಗಲ್ಲುಗಳು ​ಸಿದ್ದರಾಮಯ್ಯನವರ ಆಡಳಿತವನ್ನು ಶ್ಲಾಘಿಸಲು ಮುಖ್ಯ ಕಾರಣ ಅವರ ‘ಜನಪರ ಯೋಜನೆಗಳು’. ಅವರ ಆಡಳಿತ ವೈಖರಿಯಲ್ಲಿ ಆರ್ಥಿಕ ಶಿಸ್ತು ಮತ್ತು ಸಾಮಾಜಿಕ ಭದ್ರತೆಯ ಸುಂದರ ಸಮನ್ವಯವಿದೆ: ​ಭಾಗ್ಯಗಳ ಸರಣಿ: ಮೊದಲ ಅವಧಿಯಲ್ಲಿ (2013-18) ಜಾರಿಗೆ ತಂದ ‘ಅನ್ನಭಾಗ್ಯ’, ‘ಕ್ಷೀರಭಾಗ್ಯ’, ‘ಇಂದಿರಾ ಕ್ಯಾಂಟೀನ್’ನಂತಹ ಯೋಜನೆಗಳು ಬಡವರ ಹಸಿವು ನೀಗಿಸುವಲ್ಲಿ ಮೈಲಿಗಲ್ಲಾದವು. ​ಪಂಚ ಗ್ಯಾರಂಟಿಗಳು: ಎರಡನೇ ಅವಧಿಯಲ್ಲಿ ಜಾರಿಗೆ ತಂದ ಐದು ಗ್ಯಾರಂಟಿಗಳು (ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ) ಇಂದು ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ಆರ್ಥಿಕ ಆಸರೆಯಾಗಿವೆ. ​ಆರ್ಥಿಕ ತಜ್ಞತೆ: ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 16 ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ಇವರದು. ಆರ್ಥಿಕ ಕೊರತೆಯನ್ನು ಹತೋಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸಗಳಿಗೆ ಹಣ ಮೀಸಲಿಡುವ ಇವರ ಚಾಣಕ್ಯತನ ಮೆಚ್ಚುವಂತದ್ದು. ​ನುಡಿದಂತೆ ನಡೆದ ಸರ್ಕಾರ: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಅವರು ತೋರಿದ ಬದ್ಧತೆ ಮತದಾರರಲ್ಲಿ ಅವರ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ​ತಳಮಟ್ಟದ ನಾಯಕತ್ವ ​ಸಿದ್ದರಾಮಯ್ಯನವರು ಯಾವುದೇ ‘ಹೈಕಮಾಂಡ್’ ನೆರಳಿನಲ್ಲದೆ, ಹಳ್ಳಿ ಹಳ್ಳಿಯ ಜನರೊಂದಿಗೆ ಬೆರೆತು ಬೆಳೆದ ನಾಯಕ. ಅವರ ನೇರ ನುಡಿ, ತರ್ಕಬದ್ಧ ಮಾತುಗಳು ಮತ್ತು ಸಂವಿಧಾನದ ಮೇಲಿನ ಗೌರವ ಅವರನ್ನು ಶ್ರೇಷ್ಠ ಸಂಸದೀಯ ಪಟುವನ್ನಾಗಿ ಮಾಡಿದೆ. ​”ಅಧಿಕಾರ ಎನ್ನುವುದು ಕೇವಲ ಕುರ್ಚಿಯಲ್ಲ, ಅದು ಬಡವರ ಕಣ್ಣೀರು ಒರೆಸುವ ಅವಕಾಶ” ಎಂಬ ಸಿದ್ಧಾಂತದೊಂದಿಗೆ ಅವರು ಮುನ್ನಡೆಯುತ್ತಿರುವುದು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ​ಸಮಾರೋಪ ​ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿರುವ ಸಿದ್ದರಾಮಯ್ಯನವರು, ಕರ್ನಾಟಕದ ಸಾಮಾಜಿಕ ನಕ್ಷೆಯಲ್ಲಿ ತಮ್ಮದೇ ಆದ ಅಳಿಸಲಾಗದ ಛಾಪನ್ನು ಒತ್ತಿದ್ದಾರೆ. ಅವರ ಈ ಪಯಣ ಕೇವಲ ಸುದೀರ್ಘ ಅವಧಿಯದ್ದಷ್ಟೇ ಅಲ್ಲದೆ, ‘ಸಮ ಸಮಾಜ’ದ ನಿರ್ಮಾಣದ ಹಾದಿಯಲ್ಲಿ ಒಂದು ಭರವಸೆಯ ನಡಿಗೆಯಾಗಿದೆ.

error: Content is protected !!